ಬದೌನ್: ಉತ್ತರ ಪ್ರದೇಶದ ಬದೌನ್ನಲ್ಲಿ ಮಹಾಶಿವರಾತ್ರಿ ನಿಮಿತ್ತ ಗಂಗಾ ನದಿಯಲ್ಲಿ ಸ್ನಾನ ಮಾಡಲು ತೆರಳಿದ್ದ ಐವರು ವೈದ್ಯಕೀಯ ವಿದ್ಯಾರ್ಥಿಗಳ ಪೈಕಿ ಮೂವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದು ಅವರ ದೇಹವನ್ನು ಹೊರತೆಗೆಯಲಾಗಿದೆ.
ಸರ್ಕಾರಿ ವೈದ್ಯಕೀಯ ಕಾಲೇಜಿನ ಐವರು ಎಂಬಿಬಿಎಸ್ ವಿದ್ಯಾರ್ಥಿಗಳು ಮಧ್ಯಾಹ್ನ ಸ್ನಾನ ಮಾಡಲು ಕಚಲಾ ಗಂಗಾ ಘಾಟ್ಗೆ ಬಂದಿದ್ದರು. ಘಾಟ್ನಲ್ಲಿ ಸ್ನಾನ ಮಾಡುವಾಗ ಈ ವಿದ್ಯಾರ್ಥಿಗಳು ನೀರಿನ ಸೆಳೆತಕ್ಕೆ ಕೊಚ್ಚಿಕೊಂಡು ಹೋಗಿದ್ದಾರೆ. ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡ ಸ್ಥಳೀಯರು ಇಬ್ಬರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜನರ ಪ್ರಯತ್ನದಿಂದ ಅಂಕುಶ್ ಗೆಹ್ಲೋಟ್ ಮತ್ತು ಪ್ರಮೋದ್ ಯಾದವ್ ಅವರ ಪ್ರಾಣ ಉಳಿಸಲಾಗಿದೆ.
ಆದರೆ, ಮೂವರು ವಿದ್ಯಾರ್ಥಿಗಳನ್ನು ಉಳಿಸಲು ಸಾಧ್ಯವಾಗಿಲ್ಲ. ಮೂವರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿರುವ ಮಾಹಿತಿ ಮೇರೆಗೆ ಆಡಳಿತ ತಂಡ ಡೈವರ್ಗಳ ಸಹಾಯದಿಂದ ಶೋಧ ಕಾರ್ಯಾಚರಣೆ ನಡೆಸಿತು. ಈ ವಿದ್ಯಾರ್ಥಿಗಳು ಶನಿವಾರ ಪತ್ತೆಯಾಗಿಲ್ಲ. ಭಾನುವಾರ ಮೂವರು ವಿದ್ಯಾರ್ಥಿಗಳ ಮೃತದೇಹಗಳು ನೀರಿನಲ್ಲಿ ಮುಳುಗಿದ ಸ್ಥಳದಿಂದ ಸುಮಾರು 800 ಮೀಟರ್ ದೂರದಲ್ಲಿ ಪತ್ತೆಯಾಗಿವೆ.
ಜೈ ಮೌರ್ಯ, ಪವನ್ ಪ್ರಕಾಶ್ ಮತ್ತು ನವೀನ್ ಸೆಂಗಾರ್ ಅವರ ಮೃತದೇಹಗಳನ್ನು ಎಸ್ಡಿಆರ್ಎಫ್ ಮತ್ತು ಆಡಳಿತ ತಂಡದ ಸಹಾಯದಿಂದ ವೈದ್ಯಕೀಯ ಕಾಲೇಜು ಅಧಿಕಾರಿಗಳು ಮತ್ತು ಸ್ಥಳೀಯ ಆಡಳಿತದ ಸಹಾಯದಿಂದ ಹೊರತೆಗೆಯಲಾಗಿದೆ. ಮೂವರ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. (KANNAD PRABHA)