A part of Indiaonline network empowering local businesses
Chaitra Navratri

ಪತ್ರಕರ್ತನ ಮೇಲೆ ಸಲ್ಮಾನ್ ಖಾನ್ ಹಲ್ಲೆ ಮಾಡಿದ ಆರೋಪ

News

ಮುಂಬೈ: ಬೈಸಿಕಲ್ ಸವಾರಿಗೆ ಅಡ್ಡಿಪಡಿಸಿದ್ದರಿಂದ ತಮ್ಮ ಮೇಲೆ ಹಲ್ಲೆ ನಡೆಸಿರುವ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಹಾಗೂ ಅವರ ಬಾಡಿಗಾರ್ಡ್ ಮೇಲೆ ಎಫ್ ಐಆರ್ ದಾಖಲಿಸುವಂತೆ ಕೋರಿ ವಿದ್ಯುನ್ಮಾನ ಮಾಧ್ಯಮದ ಪತ್ರಕರ್ತರೊಬ್ಬರು ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ.

ಐಪಿಸಿ ಸೆಕ್ಷನ್ 323 ( ಮಾನಹಾನಿ ) 392 (ದರೋಡೆ ) ಮತ್ತು 506 ( ಅಪರಾಧದ ಉದ್ದೇಶ) ಅಡಿಯಲ್ಲಿ ಅಂದೇರಿಯ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಆರ್ ಆರ್ ಖಾನ್ ಅವರ ಬಳಿ ಪತ್ರಕರ್ತ ಅಶೋಕ್ ಪಾಂಡೆ ಖಾಸಗಿ ದೂರು ದಾಖಲಿಸಿದ್ದಾರೆ.

ಏಪ್ರಿಲ್ 24 ರಂದು ಮುಂಜಾನೆ ಈ ಘಟನೆ ನಡೆದಿದೆ .ಪತ್ರಕರ್ತ ಪಾಂಡೆ ಕಾರಿನಲ್ಲಿ ಹೋಗುತ್ತಿರಬೇಕಾದರೆ ಅಂಗರಕ್ಷಕರೊಂದಿಗೆ ಬೈಸಿಕಲ್ ನಲ್ಲಿ ಬರುತ್ತಿದ್ದ ಸಲ್ಮಾನ್ ಖಾನ್ ನೋಡಿದ ತಕ್ಷಣ, ಅಂಗರಕ್ಷಕರ ಒಪ್ಪಿಗೆ ಪಡೆದು ವಿಡಿಯೋ ಮಾಡಿಕೊಳ್ಳಲು ಪ್ರಾರಂಭಿಸಿದ್ದಾರೆ. ಇದರಿಂದ ಕ್ರೋದಗೊಂಡ ಸಲ್ಮಾನ್ ಖಾನ್ ಹಾಗೂ ಅವರ ಅಂಗರಕ್ಷಕರು ತಮ್ಮ ಕಾರಿನ ಬಳಿ ಬಂದು ಹಲ್ಲೆ ನಡೆಸಿದ್ದಾರೆ ಎಂದು ಪಾಂಡೆ ಆರೋಪಿಸಿದ್ದಾರೆ.

ಸಲ್ಮಾನ್ ಖಾನ್ ತಮ್ಮ ಮೇಲೆ ಹಲ್ಲೆ ನಡೆಸಿದಲ್ಲದೇ ತಮ್ಮ ಬಳಿಯಿದ್ದ ಮೊಬೈಲ್ ಪೋನ್ ಕಿತ್ತುಕೊಂಡು ಹೋಗಿದ್ದಾರೆ. ಮೂವರು ಸೇರಿ ಮನಬಂದಂತೆ ಹಲ್ಲೆ ನಡೆಸಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆಪಾದಿಸಿದ್ದಾರೆ.

ಸಲ್ಮಾನ್ ಖಾನ್ ಯಾವುದೇ ಅಪರಾಧ ಮಾಡಿಲ್ಲ ಎಂದು ಹೇಳಿ ಪೊಲೀಸರು ದೂರು ದಾಖಲಿಸಿಕೊಳ್ಳಲು ಹಿಂಜರಿದ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ದೂರು ಸಲ್ಲಿಸಿರುವುದಾಗಿ ಪಾಂಡೆ ತಿಳಿಸಿದ್ದಾರೆ.ಸಲ್ಮಾನ್ ಖಾನ್ ವಿರುದ್ಧ ಎಫ್ ಐಆರ್ ಹಾಗೂ ತನಿಖೆಗೆ ದೂರುದಾರರು ಕೋರಿದ್ದು, ಜುಲೈ 12 ರಂದು ವಿಚಾರಣೆ ನಡೆಯಲಿದೆ. (KANNADA PRABHA)

1759 Days ago